Thursday, March 31, 2011

ಕರೆ

ಇನಿಯನ ಕಾಣದೆ ಮನ ಕಾತರಿಸಿರೆ
ಸಂಜೆ ದೀಪವ ಹೀಗೆ ಹೊತ್ತಿಸದಿರೆ
ಇರುಳಿನೊಳು ಬೆಳಕಿಲ್ಲ
ಸಂಜೆಯೊಳು ಸೊಡರಿಲ್ಲ
ಒರತೆಯನಾರೋ ಬತ್ತಲು ಬಿಟ್ಟಿರೆ
ಓ ಕಾಲವೇ ಸಾಕಿನ್ನು!
ಒಲವನೋರೆಹಚ್ಚಿದ ದೂರವ
ನಲ್ಲನ ಸೇರಲಾಗದ ಗಾವುದವ

ಕರೆ ಬಂದಿಹುದು-ಮನದ ಕರೆ ಬಂದಿಹುದು..
ಸೇರಲೋಸುಗ ಎನ್ನ ಪ್ರಾಣವ
ಪ್ರಾಣಕಿಂತ ಪ್ರಾಣವಾದೆನ್ನ ಜೀವವ..

Tuesday, March 15, 2011

ಸೋನೆ ಮಳೆ

ಧರೆಯೆದೆಯ ಬಯಲಲಿ
ಕಾರ್ಮುಗಿಲು ಕರಗಿ ಸುರಿದು,
ಕಾತರಿದ ಭುವಿಯ
ನವಿರಾಗಿ ಸವರಿ,
ಹನಿಯು ಇಳಿಯುತಿಳೆಗೆ-
ಹರಡಿ ನಲಿವ ಮಂದಹಾಸ-
ಎಲ್ಲೆಡೆಯೂ ಪಸರಿತೋ..

ಅದೆಂತು ಜೀವಸಂಕುಲ
ಹಿಡಿದಿಟ್ಟ ಹನಿಗಳವೋ;
ಅದೆಂತು ರಮಣೀಯ
ಜಲಪಾತವಾಗಿಸಿದ ಹನಿಗಳವೋ;
ಭೂಮಿಯಿಂದ ಇಣುಕುವ
ಸಸ್ಯರಾಶಿಯ ಸೊಬಗು
ಅದಾರ ಸ್ವಂತವೋ..

ನಿಚ್ಚಳ ಬಾನನರಸುತ
ನಿಂತ ಸಸ್ಯವೆಂತು ಬಲ್ಲುದೋ
ಜನ್ಮವಿತ್ತ ಕಾರ್ಮುಗಿಲ?
ಬಾಷ್ಪವಿತ್ತ ಮೇಘವ?
ಮೆದುವಾದ ಧರೆಯ?