Friday, February 7, 2020

ಅವಸಾನ: ಸಹನಾ ವಿಜಯಕುಮಾರ್

ಸಹನಾ ವಿಜಯಕುಮಾರ್ ರವರ "ಕಶೀರ" ಪುಸ್ತಕವನ್ನು ಬಹು ತಡವಾಗಿ ಓದಿದ್ದ ನಾನು, ಕಾಶ್ಮೀರದಂಥಾ ಬೃಹತ್ ವಿಷಯದ ಬಗ್ಗೆ ಮೊದಲ ಬಾರಿ ಓದಿದ್ದರಿಂದ ವಿಮರ್ಶೆಯೇನನ್ನೂ ಬರೆಯಲಾಗಲಿಲ್ಲ. ಆಗಿನಿಂದ ಕಾಡಿದ್ದು, ಅವರ ಮುಂದಿನ ಪುಸ್ತಕವನ್ನು ಬಿಡದೇ, ಬಿಡುಗಡೆಯಾದ ಕೂಡಲೇ ಅವರ ಮೊದಲ ಕಾದಂಬರಿ - "ಕ್ಷಮೆ" ಯನ್ನೋದಿದ ಹಾಗೆ ಓದಿಬಿಡಬೇಕು ಅಂತ. ಕಾದಂಬರಿಯೊಂದು ಮಹತ್ತರವಾದುದಾಗಬೇಕೆಂದರೆ ವಿಷಯ ವಸ್ತು ಎಷ್ಟು ಮುಖ್ಯವೋ, ಸುಲಭಗ್ರಾಹ್ಯವಾಗಿ ಅದನ್ನು ಓದುಗರ ಮುಂದಿಡುವುದೂ ಅಷ್ಟೇ ಪ್ರಮುಖವಾಗುತ್ತದೆ. ಮಹತ್ತರವಾದ ವಸ್ತು ವಿಷಯವು ಕಶೀರದಲ್ಲಿದ್ದರೆ, ಹದವಾಗಿ ಹರವಿದ ವಿಚಾರಗಳನ್ನು ಮಂಡಿಸಿರುವ ರೀತಿ "ಅವಸಾನ" ದಲ್ಲಿ ಬಹು ಆಪ್ತವಾಗುತ್ತದೆ.

ತಂದೆಯೊಬ್ಬನ ಅವಸಾನದ ದಿನಗಳಲ್ಲಿನ ಕಥನ - ಅವಸಾನ. 
ಕಥೆಯ ಎಳೆ ಇಷ್ಟು- ಅಸ್ಪಷ್ಟ ಮಾತೊಂದನ್ನು ಬಿಟ್ಟು ಬೇರೊಂದು ಮಾಡಲಾಗದ ಪಾರ್ಶ್ವವಾಯು ಪೀಡಿತ ಬಾಬುರಾಯರು. ಆರು ವರ್ಷಗಳಿಂದ ಅಹೋರಾತ್ರಿ ಮಗುವಿನಹಾಗೆ ಗಂಡನನ್ನು ಲಾಲಿಸುತ್ತಿರುವ ಗಂಗಾಬಾಯಿ. ತಮ್ಮದೇ ಕಂಪನಿಯಲ್ಲಿ ಗಂಡನ ಸಮಕ್ಕೂ ದುಡಿಯುತ್ತಿರುವ, ಮದುವೆಯಾದ ಏಳುವರ್ಷಗಳ ಮೇಲೆ ಗರ್ಭಿಣಿಯಾಗಿರುವ ಸೊಸೆ ಸುಲಭಾ. ಯಶಸ್ಸಿನ ಹಿಂದೆ ಹಠ-ಛಲಗಳ ಬೆನ್ನೇರಿ ಹೊರಟಿರುವ ಮಗ ವಿನೋದ್. 
ಇವರೆಲ್ಲರೊಡನೆ ಮನೆಗಂಟಿಕೊಂಡಿರುವ ಕಚೇರಿಯ ಕೆಲಸದ ಸಂದರ್ಶನಕ್ಕೆಂದು ಬಂದು ಮನೆಮಗನಿಗಿಂತ ಹೆಚ್ಚಾಗುವ ಸತ್ಯ, ಹಾಗು ಬಾಬುರಾಯರನ್ನು ಕಕ್ಕುಲಾತಿಯಿಂದ ನೋಡಿಕೊಳ್ಳುವ ಆಳು ಮೋಟಾರಾಮ್ - ಇವರೆಲ್ಲರ ಸುತ್ತ...... ಇವರೆಲ್ಲರೊಳಗೆ ಘಟಿಸುವ ಕಥೆ - "ಅವಸಾನ". 

ಕಥೆಯು ಬರಿಯ ಕಥೆಯಾಗುಳಿಯದೆ, ಪ್ರತಿಯೊಂದು ಪಾತ್ರದ ಮನಮಂಥನವಾಗಿ ಹೊಮ್ಮುತ್ತದೆ. ಒಬ್ಬಬ್ಬರೂ ತಾವು ಬೆಳೆದ ಪರಿಸ್ಥಿತಿ, ಪರಿಸರಕ್ಕನುಗುಣವಾಗಿ ರೂಪಿಸಿಕೊಂಡ ಅಭಿಪ್ರಾಯ, ನಡವಳಿಕೆಗಳು- ಅವರವರ ಮಟ್ಟಿಗೆ ಸರಿಯೆಂದೇ ಕಾಣುತ್ತ ಹೋಗುತ್ತದೆ. ಪ್ರತಿಯೊಂದು ಪಾತ್ರವೂ ತನಗೆ ಬಾಲ್ಯದಿಂದ ಸಿಕ್ಕ ಸಂಸ್ಕಾರದಿಂದ ಹೇಗೆ ಮತ್ತು ಎಷ್ಟು ಪ್ರಭಾವಿತವಾಗುತ್ತದೆ? ಅನ್ನುವುದು ಪುಟಪುಟವೂ ಬಿಡಿಸಿಕೊಳ್ಳುತ್ತ ಹೋಗುತ್ತದೆ. ಪಾತ್ರಗಳೆಲ್ಲ ತಂತಮ್ಮ ಜಾಗೆಗಳಲ್ಲಿ ಸಶಕ್ತವಾಗಿರುವುದರಿಂದಲೇ ಪುಸ್ತಕಕ್ಕೆ ತೂಕ ಹೆಚ್ಚು.

ಇನ್ನು ಕಥೆಯೆಂಬ ಅರಿವೆಯ ಕೆಲ ಹೊಳಹುಗಳನ್ನು ಹರವಲು ಪ್ರಯತ್ನಿಸುತ್ತೇನೆ.

ಪೀಡಿತರೆಂಬ ರಿಯಾಯಿತಿ ಸದಾ ರೋಗಿಗಿದ್ದರೆ, ರೋಗಿಯನ್ನು ಸದಾ ನೋಡಿಕೊಳ್ಳುವ ಜೀವಕ್ಕಾಗಿ ಮರುಗುವವರು ಕಾಣಸಿಗುವುದೇ ಕಷ್ಟ. ತನ್ನಮ್ಮನ ನಿತ್ಯದ ಗೋಳನ್ನು ನೋಡಲಾಗದೆ ಮರುಗುವ ಮಗ ತನ್ನ ಪಾಲಿಗೆ, ತನ್ನ ಮನಃ ಸ್ಥಾನದಲ್ಲಿ, ತನ್ನ ಹೆಂಡತಿಯ ಪಾಲಿಗೂ ಕೊನೆಗೆ ಸರಿ; ಆದರೆ ತನ್ನ ತಾಯಿಗೆ, ಆತ ಹೃದಯಹೀನ. ಇಲ್ಲಿ ಮುಖ್ಯವಾಗುವುದು ಯಾವುದು? ಗಂಡನ ಕರುಣಾಜನಕ ಸ್ಥಿತಿಯೋ? ಕಳೆದ ಒಳ್ಳೆಯ ಕ್ಷಣಗಳ ನೆನಪೋ? ಅಥವಾ ಪತಿಗೆ ಹೀಗಾದ ನಂತರದಲ್ಲಿ ಇನ್ನಷ್ಟು ಬಿರುಸಾಗಿ ಕಾಣುತ್ತಿರುವ ಮಗನ ನಡವಳಿಕೆಯೋ?
ಮಗನ ಪಾಲಿಗೆ ಅವನ ತಾಯಿ ಬರಿಯ ನೊಂದ ಜೀವ; ಮುಂಚಿನಿಂದಲೂ, ಇಡಿಯ ಮನೆಯಲ್ಲವಳೊಬ್ಬಳು ಕೆಲಸದಾಳಿನಂತೆ ದುಡಿದು, ಸುಖವೆಂಬುದೇನನ್ನೂ ಕಾಣದೆ, ಕೊನೆಗೆ ತಾಯಿ-ಮಗುವೆಂಬ ಮಮತೆಯನ್ನೇ ಬದಿಗಿಟ್ಟು ಪತಿ ಮತ್ತು ಆತನ ವಿಸ್ತರಿತ ಕುಟುಂಬದ ಸಮಯಪಾಲಕಿ. ಇನ್ನು ತಂದೆ? ಮಗನ ಪಾಲಿಗೆ ಎಂದೆಂದಿಗೂ ಪ್ರೀತಿಯನ್ನೇ ತೋರದ, ತೋರಲಾರದೇ ಹೋಗಿ, ಕೊನೆಗೆ ಉಳಿದಿರುವ ಒಂದಿಷ್ಟು ಗೌರವವನ್ನೂ ತನ್ನ ವ್ಯವಹಾರ ವೈಫಲ್ಯದ ಜೊತೆ ಕಳೆದುಕೊಂಡ ಕೈಲಾಗದವ. ತನ್ನ ರೆಕ್ಕೆಗಳು ವಿಸ್ತರಿಸಿದಷ್ಟೂ, ಯಶಸ್ಸು ಗಳಿಸಿಕೊಂಡಷ್ಟೂ "ಮೊಂಡಾದರೂ ಏನೀಗ? ಸರಿಯಾದರಷ್ಟೇ ಸಮ" ಎಂದುಕೊಳ್ಳುವ ಮಗನ ದಾರ್ಷ್ಯ ಹೆಚ್ಚಾದಷ್ಟೂ, ಹೆತ್ತ ತಂದೆ-ತಾಯಿಗಳು ಅವಲೋಕನಕ್ಕೆ ಸಿಲುಕಿಬಿಡುತ್ತಾರೆ.

ಇನ್ನು ಸಂಸ್ಕಾರದ ಮಾತು. ಸಂಸ್ಕಾರ ಹುಟ್ಟಿನಿಂದ ಬರಬೇಕಾದದ್ದೋ? ಅದರಲ್ಲಿ ವಾತಾವರಣದ ಪಾಲೆಷ್ಟು? ಮುಂಬೈನ ಕಾಮಾಠಿಗರ ಕಾಮಾಠಿಪುರದ ಗಲ್ಲಿಯಿಂದ ಬಂದ ಮುನ್ನಾ "ಸತ್ಯ"ನಾಗುವ ಕಥೆಯಲ್ಲಿನ ಹಿನ್ನೆಲೆ ಸ್ವಾರಸ್ಯಕರ. ಲೈಂಗಿಕ ಕಾರ್ಯಕರ್ತೆಯಾದ ತಾಯಿ ಆತನನ್ನು ಕೆಸರೊಳಗಿನ ಕಮಲದಂತೆ ಬೆಳೆಸುವಾಗ ಇದ್ದಕ್ಕಿದ್ದಂತೆ ಮುನ್ನಾನನ್ನು ಕಾಡುವ ಕುಟುಂಬವೆಂದರೇನು? ಎಂಬ ಜಿಜ್ಞಾಸೆ - ಕುಟುಂಬದಲ್ಲಿ ತಂದೆಯೊಬ್ಬನಿರಬೇಕಲ್ಲವೇ? ಅವನೆಲ್ಲಿ? ನನ್ನ ಕುಟುಂಬದ ಚಿತ್ರ ಸಂಪೂರ್ಣವಾಗುವುದು ಯಾವಾಗ ಅನ್ನುವ ಪ್ರಶ್ನೆ ವಯಸ್ಸಾದವರ ಸೇವೆಯಲ್ಲಿ ತನ್ನ ತಂದೆತಾಯಿಯ ರೂಪ ಕಾಣುವಲ್ಲಿ ಸಮಾಧಾನಿಸಿಕೊಳ್ಳುವ ಸತ್ಯ.

ಇನ್ನೊಂದು ಎಳೆ ಮೋಟಾರಾಮನದ್ದು. ಆತ ಕೆಲವು ಕಡೆ ಅಸಹಾಯಕರ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ವೈಯುಕ್ತಿಕ ವಿಚಾರಗಳಿಂದ ದೂರವುಳಿಯುವ ಪ್ರಯತ್ನದಲ್ಲೇ ಈ ಎಲ್ಲ ಎಳೆಗಳಲ್ಲೂ ಸಿಲುಕಿಕೊಳ್ಳುತ್ತ ಹೋಗುತ್ತಾನೆ. ತನಗನಿಸಿದ್ದನ್ನು ತನ್ನ ಬುದ್ಧಿ-ತರ್ಕಕ್ಕೆ ನಿಲುಕುವ ಮಟ್ಟಿಗೆ ಯೋಚಿಸುತ್ತ ,ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಉಳಿಯುತ್ತಾನೆ.

ಕುಟುಂಬಕ್ಕಾಗಿ ಹಂಬಲಿಸುವ ಮುನ್ನಾ, ಕಾಮಾಠಿಪುರದ ಗಲ್ಲಿಯಲ್ಲಿನ ಮುನ್ನಾನನ್ನು ಆಶ್ರಮವೊಂದು "ಸತ್ಯ" ನನ್ನಾಗಿಸುವ ಬಗೆ, ಆತನ ಫಂಡರಾಪುರದ ಯಾತ್ರೆಯ ಸಂದರ್ಭ, ಆತನೊಳಗೆ ತಾನು ಏಳಿಗೆ ಕಾಣಬೇಕೆಂಬ ಶ್ರದ್ಧೆ, ನಿಜವನ್ನೇ ಹೇಳಬೇಕೆಂಬ ನಂಬುಗೆ, ಅದಕ್ಕಾಗಿ ಏನನ್ನಾದರೂ ಪಣವಾಗಿಡುವ ಸತ್ಯನ ಬದ್ಧತೆ ಆತನ ಪಾತ್ರವನ್ನು ಆಪ್ತವಾಗಿಸುತ್ತದೆ.

ಮೂಲ ಪ್ರಶ್ನೆ ಉದ್ಭವವಾಗುವುದು, ಯಾರೇ ಆಗಲೀ, ಯಾಕೆ ತಮಗನಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ? ತಂತಮ್ಮ ಮನಸ್ಥಿತಿಗಳಿಗೆ ಸ್ಪಂದಿಸುತ್ತ ಸ್ಪಂದನೆಯು ವ್ಯಕ್ತಿತ್ವದೊಡನೆ ಮಿಳಿತವಾಗುವ ಗೆರೆ ಎಷ್ಟು ಅಸ್ಪಷ್ಟ? ಈ ಆಯಾಮದಲ್ಲಿ ಕಥೆ ಸಾಗುತ್ತ ಪೂರಕ ಸಂದರ್ಭಗಳಿಗೆ ಪುಷ್ಟಿಕೊಡುತ್ತ, ಓದುಗರನ್ನು ಆಲೋಚನೆಗೆ ದೂಡುತ್ತಾ ಸಾಗುತ್ತದೆ.

ಒಮ್ಮೆ ಓದಲು ಶುರುವಿಟ್ಟು ಸೆಳೆವಿನಲ್ಲಿ ಸಿಕ್ಕಿಹೋದರೆ ಪುಸ್ತಕ ಮುಗಿಯುವವರೆಗೆ ಬಿಡದ ಸೆಳೆತ - "ಅವಸಾನ". ನನ್ನ ಪತಿ ಮಧ್ಯರಾತ್ರಿ ೩ ಗಂಟೆಯವರೆಗೂ ಪುಸ್ತಕ ಕೆಳಗಿಡದೆ ಓದುತ್ತಿದ್ದು, ಕಾಮಾಠಿಪುರದ ಮಗುವಿನ ಬವಣೆಗಳಿಗೆ ನಾನು ದುಃಖಿಸಿಕೊಂಡು ಅಳುತ್ತಿರುವುದು ಗಮನಿಸಿ, - "ಟ್ವೀಟ್ ಮಾಡ್ತೀನಿ @sahanavijayakumar, you have messed with my wife's brain" ಎನ್ನುವಾಗ ನನ್ನ ಮುಖದಲ್ಲಿ ಮಂದಹಾಸ  😍 😁

ತುಂಬಾ ದಿನಗಳ ನಂತರ ಹಿಡಿದೊಂದು ಪುಸ್ತಕದ ಕಥೆಯಲ್ಲಿ ಮನುಷ್ಯ ಸ್ವಭಾವಗಳಿಗೆ ಇಷ್ಟೊಂದು ಒಳನೋಟ ಸಿಕ್ಕ ಸಂತೋಷ.